0 Shares

ಕೊಪ್ಪಳ : ಜಿಲ್ಲೆಯಲ್ಲಿ ಈಗ ಲವ್ ಜಿಹಾದ್ ಆತಂಕ ಮನೆಮಾಡಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಲವ್ ಜಿಹಾದ್ ಚರ್ಚೆ ಜೋರಾಗಿದೆ. ಮುಸ್ತಫಾ ಖಾದ್ರಿ ಎಂಬಾತನ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಜಿಲ್ಲೆಯಲ್ಲಿ ಸಂಚಲನ ಮೂಡಿಸಿವೆ.

16 ಯುವತಿಯರ ಸಾವಿರಾರು ವಿಡಿಯೋಗಳು ಆತನ ಫೋನ್‌ನಲ್ಲಿ ಪತ್ತೆಯಾಗಿವೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಇದೀಗ ಬಿಜೆಪಿ ನಿಯೋಗ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕೂಡಲೇ ಕ್ರಮಕ್ಕೆ ಆಗ್ರಹಿಸಿದೆ. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಬಿಜೆಪಿ‌ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ಈಗ ಮುಸ್ತಫಾ ಖಾದ್ರಿ ಎಂಬಾತನ ವಿರುದ್ಧ ಕೇಳಿಬಂದಿರುವ ಆರೋಪಗಳು ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಲವ್ ಜಿಹಾದ್ ಕೃತ್ಯ ಎಸಗುತ್ತಿರುವ ಆರೋಪ ಹಿನ್ನಲೆ ಮುಸ್ತಫಾ ವಿರುದ್ಧ ಈವರೆಗೂ ಕ್ರಮಕೈಗೊಳ್ಳದ ಹಿನ್ನೆಲೆ, ಇಂದು ಎಂಎಲ್‌ಸಿ ಹೇಮಲತಾ ನಾಯಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ ಅವರಿಗೆ ಮನವಿ ಸಲ್ಲಿಸಿದೆ.

ಬಿಜೆಪಿ ನಾಯಕರ ಆರೋಪದ ಪ್ರಕಾರ ಮುಸ್ತಫಾ ಖಾದ್ರಿ ಅಮಾಯಕ ಹಿಂದೂ ಯುವತಿಯರನ್ನು ಪುಸಲಾಯಿಸಿ ಮತಾಂತರ ಮಾಡಲು ಪ್ರಯತ್ನಿಸಿದ್ದಾನೆ. ಆತನ ಮೊಬೈಲ್ ಫೋನ್‌ನಲ್ಲಿ ಬರೋಬ್ಬರಿ 16 ಜನ ಹಿಂದೂ ಯುವತಿಯರ 9 ಸಾವಿರ ವಿಡಿಯೋಗಳು ಹಾಗೂ 7ಸಾವಿರಕ್ಕೂ ಅಧಿಕ ಫೋಟೋಗಳು ಪತ್ತೆಯಾಗಿವೆ ಎನ್ನುತ್ತಿದ್ದಾರೆ. ಕೂಡಲೇ ಆತನ ವಿರುದ್ದ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ನಾಯಕರು ಎಸ್​​​ಪಿಗೆ ಮನವಿ ಸಲ್ಲಿಸಿದರು.

ಪೊಲೀಸ್ ಇಲಾಖೆಯ ವಿಳಂಬ ಧೋರಣೆ ವಿರುದ್ಧ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದಾರೆ. ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಆ ವಿಡಿಯೋಗಳು ವೈರಲ್ ಆದರೆ ಅಮಾಯಕ ಯುವತಿಯರ ಗತಿ ಏನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ಥಳೀಯ ಶಾಸಕರು ಮತ್ತು ಸಂಸದರ ಒತ್ತಡಕ್ಕೆ ಮಣಿದು ಪೊಲೀಸರು ಮುಸ್ತಫಾನನ್ನು ಬಂಧಿಸುತ್ತಿಲ್ಲ ಎಂಬ ಗಂಭೀರ ಆರೋಪವೂ ಮಾಡಿದ್ದಾರೆ.

ಗಾಂಜಾ, ಹುಕ್ಕಾ ಅಥವಾ ಮಟ್ಕಾ ದಂಧೆಗೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿವೆ. ಮುಸ್ತಫಾ ಕೇವಲ ಲವ್ ಜಿಹಾದ್ ಆರೋಪಿಯಷ್ಟೇ ಅಲ್ಲ, ಆತ ಮಟ್ಕಾ ಕಿಂಗ್ ಪಿನ್ ಕೂಡ ಆಗಿದ್ದಾನೆ. ಗಾಂಜಾ ಸೇವನೆಯ ವಿಡಿಯೋಗಳು ಲಭ್ಯವಿದ್ದರೂ, ನಿಷೇಧಿತ ಹುಕ್ಕಾ ಆತನಿಗೆ ಎಲ್ಲಿಂದ ಸಿಗುತ್ತಿದೆ ಎಂದು ಪ್ರಶ್ನಿಸಿರುವ ಬಿಜೆಪಿ, ಆತನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದು, ಮುಸ್ತಫಾ ಬಂಧನವಾಗದೆ ಹೋದರೆ ಹೋರಾಟ ಮಾಡಲಾಗವುದು ಎಂದಿದ್ದಾರೆ.

ಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿರುವ ಬಿಜೆಪಿ, ಒಂದು ವೇಳೆ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಮತ್ತೊಂದು ಕಡೆ ಪ್ರಕರಣ ರಾಜಕೀಯ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಮುಸ್ತಫಾ ಬಳಿ ಇದ್ದ ಮೊಬೈಲ್​ಗಳು ಇದುವರೆಗೂ ಓಪನ್ ಆಗಿಲ್ಲ, ಮೊಬೈಲ್ ಓಪನ್ ಆದ ಬಳಿಕವೇ ಪ್ರಕರಣದ ಅಸಲಿಯತ್ತು ಬಯಲಾಗಲಿದೆ. ಎರಡು ಮೊಬೈಲ್​​ಗಳನ್ನ ಪೊಲೀಸರು ಎಫ್​ಎಸ್​ಎಲ್​​ಗೆ ರವಾನೆ ಮಾಡಿದ್ದು, ಆರೋಪಿ ಮುಸ್ತಫಾರನ್ನು ಕರೆದು ವಿಚಾರಣೆ ಮಾಡಿದ್ದಾರೆ. ಐಟಿ ಆ್ಯಕ್ಟ್ ಅಡಿಯಲ್ಲಿ ದೂರು ದಾಖಲಾದ ಕಾರಣ ಕೊಪ್ಪಳ ಸೈಬರ್ ಕ್ರೈಂ ಪೊಲೀಸರು ಕರೆದು ವಿಚಾರಣೆ ಮಾಡಿದ್ದಾರೆ.

0 Shares

By admin

Leave a Reply

Your email address will not be published. Required fields are marked *