ತುಮಕೂರು : ಕೃಷಿಯಲ್ಲಿ ತೊಡಗಿರುವ ಗ್ರಾಮೀಣ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಭಿನ್ನ ಪತ್ರ ಬರೆದು ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ಗಮನ ಸೆಳೆದಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ವ್ಯವಸಾಯ ಅವಲಂಬನೆ ಹೆಚ್ಚಾಗಿದೆ. ಗ್ರಾಮಗಳಲ್ಲಿ ಹೆಚ್ಚಿನ ಯುವಕರು ವಾಸವಿದ್ದು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಇಂತಹ ಕೃಷಿ ಯುವಕರನ್ನು ಮದುವೆಯಾಗಲು ಹಲವಾರು ಹೆಣ್ಣು ಮಕ್ಕಳು ನಿರಾಕರಿಸುತ್ತಿರುವ ಕಾರಣ, ಮೂವತ್ತು ವರ್ಷ ದಾಟಿದರೂ ಮದುವೆಯಾಗದೆ ಸಂಕಷ್ಟದಲ್ಲಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆ, ಹಳ್ಳಿಗಳಲ್ಲಿ ವಾಸವಿದ್ದು ಕೃಷಿ ಮಾಡಿಕೊಂಡಿರುವ ಗಂಡು ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ವಿಶೇಷ ಭತ್ಯೆ ನೀಡುವ ಜೊತೆಗೆ ಅವರಿಗೆ ವಿಶೇಷ ಸ್ಥಾನಮಾನ ಘೋಷಿಸುವಂತೆ ಸರ್ಕಾರವನ್ನು ಅವರು ಮನವಿ ಮಾಡಿದ್ದಾರೆ. ಶಾಸಕ ಡಾ. ರಂಗನಾಥ್ ಬರೆದಿರುವ ಈ ಪತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
