0 Shares

ಬೆಂಗಳೂರು : ಮಹಾರಾಷ್ಟ್ರದ ನಾಂದೇಡ್​ ಮತ್ತು ಕರ್ನಾಟಕದ ಬೀದರ ನಡುವೆ ಹೊಸ ರೈಲು ಮಾರ್ಗ ಯೋಜನೆಯು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರಿಗೆ ಉತ್ತರಿಸಿ ಪತ್ರ ಬರೆದಿರುವ ಅಶೋಕ್ ಚವಾಣ್, ವಿಳಂಬಕ್ಕೆ ಕಾರಣವೇನೆಂದು ವಿವರಿಸಿದ್ದಾರೆ.

ನಾಂದೇಡ್​–ಬೀದರ ನಡುವಿನ ಹೊಸ ರೈಲು ಮಾರ್ಗ ಯೋಜನೆಗೆ ಕರ್ನಾಟಕ ಸರ್ಕಾರದ ಅನುಮೋದನೆ ಇನ್ನೂ ಲಭಿಸದ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ತಡವಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಿರುವ ಚವಾಣ್, ಸುಮಾರು 155 ಕಿಲೋಮೀಟರ್ ಉದ್ದದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಸುಮಾರು 100 ಕಿಲೋಮೀಟರ್ ಭಾಗ ಮಹಾರಾಷ್ಟ್ರ ರಾಜ್ಯ ವ್ಯಾಪ್ತಿಗೆ ಒಳಪಡುತ್ತದೆ. ಯೋಜನೆ ಪೂರ್ಣಗೊಂಡಲ್ಲಿ ನಾಂದೇಡ್​ ಮತ್ತು ಬೆಂಗಳೂರು ನಡುವಿನ ಪ್ರಯಾಣದ ದೂರ ಕಡಿಮೆಯಾಗುವ ಸಾಧ್ಯತೆ ಇದ್ದು, ಎರಡೂ ರಾಜ್ಯಗಳ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಣೆ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈ ಯೋಜನೆಯನ್ನು 50:50 ವೆಚ್ಚ ಹಂಚಿಕೆ ಆಧಾರದಲ್ಲಿ ಜಾರಿಗೆ ತರಲು ತೀರ್ಮಾನಿಸಿದೆ. ಮಹಾರಾಷ್ಟ್ರ ಸರ್ಕಾರವು ತನ್ನ ಪಾಲಿನ ವೆಚ್ಚಕ್ಕೆ ಈಗಾಗಲೇ ಸಚಿವ ಸಂಪುಟದ ಅನುಮೋದನೆ ನೀಡಿ ಯೋಜನೆಗೆ ಬದ್ಧತೆ ವ್ಯಕ್ತಪಡಿಸಿದೆ. ಆದರೆ, ಕರ್ನಾಟಕ ಸರ್ಕಾರದಿಂದ ಇನ್ನೂ ಅಧಿಕೃತ ಒಪ್ಪಿಗೆ ಹಾಗೂ ಹಣಕಾಸಿನ ಭರವಸೆ ಸಿಕ್ಕಿಲ್ಲ ಎಂದು ಚವಾಣ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಈ ರೈಲು ಮಾರ್ಗ ಕಾರ್ಯರೂಪಕ್ಕೆ ಬಂದರೆ ನಾಂದೇಡ್​‌ನ ಶ್ರೀ ಹಜೂರ್ ಸಾಹಿಬ್ ಹಾಗೂ ಬೀದರ‌ನ ನಾನಕ್ ಝೀರಾ ಸಾಹಿಬ್ ಯಾತ್ರಾಕ್ಷೇತ್ರಗಳು ನೇರ ಸಂಪರ್ಕ ಪಡೆಯಲಿವೆ. ಇದರಿಂದ ಯಾತ್ರಿಗಳಿಗೆ ಅನುಕೂಲವಾಗುವುದರ ಜೊತೆಗೆ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಉದ್ಯೋಗಾವಕಾಶಗಳ ವೃದ್ಧಿಗೂ ಸಹಕಾರಿ ಆಗಲಿದೆ ಎಂದು ಅಶೋಕ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

0 Shares

By admin

Leave a Reply

Your email address will not be published. Required fields are marked *