ಬೆಂಗಳೂರು : ಹುಟ್ಟುಹಬ್ಬ ಎಂದರೆ ಸಂಭ್ರಮ-ಸಡಗರ. ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ, ಖುಷಿ ಪಟ್ಟು ಮನೆಗೆ ಮರಳುತ್ತಿದ್ದ ಯುವಕನ ಬಾಳಲ್ಲಿ ವಿಧಿ ಕ್ರೂರವಾಗಿ ಆಟವಾಡಿದೆ. ಹುಟ್ಟುಹಬ್ಬದ ದಿನವೇ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿದೆ.
ಮೃತ ದುರ್ದೈವಿ ಯುವಕನನ್ನು ಬೆಂಗಳೂರು ಉತ್ತರ ತಾಲೂಕಿನ ಗುಡ್ಡದಹಳ್ಳಿ ನಿವಾಸಿ ಪವನ್ (24) ಎಂದು ಗುರುತಿಸಲಾಗಿದೆ. ನಿನ್ನೆ (ಮಂಗಳವಾರ) ಸಂಜೆ ಪವನ್ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದ. ಸಂಭ್ರಮಾಚರಣೆ ಮುಗಿಸಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಐವರಕಂಡಪುರದಲ್ಲಿ ಈ ದುರಂತ ಸಂಭವಿಸಿದೆ.
ಪವನ್ ಸಚರಿಸುತ್ತಿದ್ದ ಬೈಕ್ ಮತ್ತು ಎದುರಿನಿಂದ ಬಂದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿವೆ. ಎರಡೂ ವಾಹನಗಳು ಅತಿಯಾದ ವೇಗದಲ್ಲಿದ್ದವು ಎಂದು ಹೇಳಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಿಂದ ಕೆಳಗೆ ಬಿದ್ದ ಪವನ್, ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಹುಟ್ಟುಹಬ್ಬದಂದೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸೋಲದೇವನಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
