0 Shares

ಕೊಪ್ಪಳ : ಜಿಲ್ಲೆಯ ಜನತೆಗೆ ಈಗ ಉಸಿರಾಡುವುದೇ ದೊಡ್ಡ ಸಾಹಸವಾಗಿದೆ. ಕಾರ್ಖಾನೆಗಳು ಹೊರಸೂಸುವ ವಿಷಕಾರಿ ಹೊಗೆಗೆ ರೋಸಿ ಹೋಗಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ಜಿಲ್ಲಾಡಳಿತ ಈಗ ಎಚ್ಚೆತ್ತುಕೊಂಡಿದೆ.

ನಿಯಮ ಉಲ್ಲಂಘಿಸಿದ 5 ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದ್ದು, 3 ಕಾರ್ಖಾನೆಗಳಿಗೆ ಬೀಗ ಬೀಳುವುದು ಫಿಕ್ಸ್ ಆಗಿದೆ. ಕಪ್ಪು ಹೊಗೆ ಉಗಳೋ ಕಾರ್ಖಾನೆಗಳು ಬಹುತೇಕ ಬಂದ್ ಆಗೋ ಸಾಧ್ಯತೆ ಇದೆ. ಕಾರ್ಖಾನೆಗಳು ಬಂದ್ ಆಗಿದ್ದೆ ನಿಜವಾದರೆ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ಗವಿಸಿದ್ದೇಶ್ವರನ ನಾಡು ಕೊಪ್ಪಳದಲ್ಲಿ ಒಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ತಲೆಯೆತ್ತಿರುವ ಬೃಹತ್ ಕಾರ್ಖಾನೆಗಳು, ಮತ್ತೊಂದು ಕಡೆ ಆ ಕಾರ್ಖಾನೆಗಳು ಕಾರುತ್ತಿರುವ ವಿಷಕಾರಿ ಹೊಗೆ. ಹಗಲು ಹೊತ್ತಿನಲ್ಲೇ ಇಲ್ಲಿನ ಆಕಾಶ ಕಪ್ಪಾಗಿ ಕಾಣುತ್ತಿದೆ. ಜನರ ಶ್ವಾಸಕೋಶಕ್ಕೆ ಗಾಳಿಯ ಬದಲು ವಿಷಕಾರಿ ಕೆಮಿಕಲ್ ಮಿಶ್ರಿತ ಧೂಳು ಸೇರುತ್ತಿದೆ.

ಈ ಸ್ಥಳೀಯರ ಮನೆಯ ಅಂಗಳ, ಕುಡಿಯುವ ನೀರು, ರೈತರು ಬೆಳೆದ ಬೆಳೆಗಳ ಮೇಲೂ ಕಪ್ಪು ಬಣ್ಣದ ಬೂದಿ ಕುಳಿತುಕೊಳ್ಳುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಸ್ತಮಾ, ಚರ್ಮ ವ್ಯಾಧಿ ಮತ್ತು ಉಸಿರಾಟದ ತೊಂದರೆಗಳು ಕಾಡುತ್ತಿವೆ.

ವರ್ಷಗಳಿಂದ ಮನವಿ ಮಾಡಿದರೂ ಕೇಳದ ಅಧಿಕಾರಿಗಳ ವಿರುದ್ಧ ಜನತೆ ಈಗ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದೀಗ ಜನರ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶಾಸಕರು, ಡಿಸಿ ಸಭೆ ಮಾಡಿದ್ದಾರೆ. ಎಲ್ಲವೂ ಇದೆ, ಆದರೆ ಆರೋಗ್ಯ ಇಲ್ಲ ಎಂದು ಹಿರಿಯರೊಬ್ಬರು ಸಭೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಶೋಕಾಸ್ ನೋಟಿಸ್ ಜಾರಿ: 3 ಫ್ಯಾಕ್ಟರಿಗಳ ಬಂದ್​​ಗೆ ಆದೇಶ – ಜನರ ಆಕ್ರೋಶಕ್ಕೆ ಬೆದರಿದ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ, ಕೊನೆಗೂ ಕಾರ್ಯಾಚರಣೆಗೆ ಇಳಿದಿದೆ. ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಮಾಲಿನ್ಯ ಉಂಟುಮಾಡುತ್ತಿದ್ದ 5 ಪ್ರಮುಖ ಕಾರ್ಖಾನೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲ, ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಮಾಲಿನ್ಯ ಹರಡುತ್ತಿದ್ದ 3 ಫ್ಯಾಕ್ಟರಿಗಳನ್ನು ತಕ್ಷಣವೇ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.

ಡಿಸಿ ಸುರೇಶ್ ಇಟ್ನಾಳ್ ಹೇಳಿದ್ದಿಷ್ಟು – ನಾವು ನಿರಂತರವಾಗಿ ಮಾನಿಟರ್ ಮಾಡುತ್ತಿದ್ದೇವೆ. ಯಾವ ಕಾರ್ಖಾನೆಗಳು ಫಿಲ್ಟರ್ ಬಳಸದೆ ಹೊಗೆ ಬಿಡುತ್ತವೆಯೋ ಅವುಗಳ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಈಗಾಗಲೆ 3 ಫ್ಯಾಕ್ಟರಿಗಳಿಗೆ ಕ್ಲೋಸರ್ ಆರ್ಡರ್ ನೀಡಿದ್ದೇವೆ ಎಂದು ಡಿಸಿ ಸುರೇಶ್ ಇಟ್ನಾಳ್ ಹೇಳಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿರುವ ಪಿಬಿಕೆಎಸ್, ಇಸ್ಪಾತ್, ವನ್ಯ ಸ್ಟೀಲ್ ಒಂದು ಎರಡು, ಹೆಆರ್​ಜಿಗೆ ನೋಟಿಸ್ ಕೊಡಲಾಗಿದೆ. ಈಗಾಗಲೇ ಮೂರು ಕಾರ್ಖಾನೆಗಳ ತಪಾಸಣೆ ಮುಗದಿದ್ದು, ಎರಡು ಕಾರ್ಖಾನೆಗೆ ಕ್ಲೋಸರ್ ನೋಟಿಸ್​ ನೀಡಲಾಗಿದೆ. ಇನ್ನೊಂದು ಕೂಡ ಕ್ಲೋಸ್ ಆಗಲಿದೆ ಎನ್ನುತ್ತಿದ್ದಾರೆ.

ಕೈಗಾರಿಕೆಗಳು ಬೇಕು, ಆದರೆ ಜನರ ಜೀವ ಬಲಿ ಕೊಟ್ಟು ಅಲ್ಲ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿರುವುದು ಸಮಾಧಾನದ ಸಂಗತಿ. ಆದರೆ ಈ ನೋಟಿಸ್ ಮತ್ತು ಬಂದ್ ಕೇವಲ ಕಣ್ಣೊರೆಸುವ ತಂತ್ರವಾಗಬಾರದು ಎಂಬುದು ಕೊಪ್ಪಳ ಜಿಲ್ಲೆಯ ಜನರ ಆಗ್ರಹವಾಗಿದೆ.

0 Shares

By admin

Leave a Reply

Your email address will not be published. Required fields are marked *