0 Shares

ಬಾಲಿವುಡ್‌ನ ಹಿರಿಯ ನಟ ರಾಕೇಶ್ ಬೇಡಿ ಅವರು ‘ಧುರಂಧರ್ 2’ ಸಿನಿಮಾದಲ್ಲಿ ಮಾಡಿದ ಪಾತ್ರ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಪಾಕಿಸ್ತಾನದ ರಾಜಕಾರಣಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಯಶಸ್ಸಿನ ಅಲೆಯಲ್ಲಿ ರಾಕೇಶ್ ಬೇಡಿ ಅವರು ತೇಲುತ್ತಿದ್ದಾರೆ.

ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಒಂದು ವರ್ಗದ ಜನರು ಇದನ್ನು ಪ್ರೊಪಗಾಂಡಾ ಎಂದು ಕರೆಯುತ್ತಿದ್ದಾರೆ. ಈ ಟೀಕೆಗಳಿಗೆ ರಾಕೇಶ್ ಬೇಡಿ ಅವರು ಖಡಕ್ ಉತ್ತರ ನೀಡಿದ್ದು, ಇದೇ ವೇಳೆ ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿದ ‘ಎಮರ್ಜೆನ್ಸಿ’ ಚಿತ್ರದ ಸೋಲನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಕೇಶ್ ಬೇಡಿ, ‘ನಾನು ರಾಜಕೀಯವನ್ನು ನಂಬುವುದಿಲ್ಲ. ಕೇವಲ ಸಿನಿಮಾವನ್ನು ನಂಬುತ್ತೇನೆ. ಪ್ರತಿಯೊಬ್ಬರಿಗೂ ಒಂದು ಚಿತ್ರವನ್ನು ಇಷ್ಟಪಡುವ ಅಥವಾ ಇಷ್ಟಪಡದಿರುವ ಹಕ್ಕಿದೆ. ಆದರೆ ಒಂದು ಚಿತ್ರವನ್ನು ಸರ್ಕಾರದ ಪರ ಅಥವಾ ಸರ್ಕಾರದ ವಿರೋಧಿ ಎಂಬ ಹಣೆಪಟ್ಟಿಯ ಅಡಿಯಲ್ಲಿ ವರ್ಗೀಕರಿಸುವುದು ಸರಿಯಲ್ಲ. ಜನರು ಈ ಚಿತ್ರವನ್ನು ಪ್ರೀತಿಸುತ್ತಿದ್ದಾರೆ ಎನ್ನುವುದೇ ಅಂತಿಮ ತೀರ್ಪು’ ಎಂದು ಹೇಳಿದ್ದಾರೆ.

‘ಧುರಂಧರ್ 2’ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ರಾಕೇಶ್ ಬೇಡಿ ಅವರು ರಾಜಕೀಯ ವ್ಯಕ್ತಿಗಳ ಬಯೋಪಿಕ್‌ಗಳ ಬಗ್ಗೆ ಪ್ರಸ್ತಾಪಿಸಿದರು. ‘ಇತ್ತೀಚೆಗೆ ಇಂದಿರಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಚಿತ್ರಗಳು ಬಂದವು. ಆದರೆ ಆ ಚಿತ್ರಗಳು ಕನಿಷ್ಠ ಎರಡು ದಿನವೂ ಚಿತ್ರಮಂದಿರದಲ್ಲಿ ಓಡಲಿಲ್ಲ. ಆದರೆ ಧುರಂಧರ್ ಚಿತ್ರದ ಬರವಣಿಗೆ ಮತ್ತು ಮೇಕಿಂಗ್ ಅತ್ಯಂತ ಪ್ರಬಲವಾಗಿದೆ. ಇಷ್ಟು ದೊಡ್ಡ ಮಟ್ಟದ ಸಿನಿಮಾವನ್ನು ಪ್ರೇಕ್ಷಕರು ಈ ಹಿಂದೆ ನೋಡಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಕೇಶ್ ಬೇಡಿ ಅವರ ಈ ಮಾತುಗಳು ನೇರವಾಗಿ ನಟಿ ಕಂಗನಾ ರಣಾವತ್ ಅವರಿಗೆ ನೀಡಿದ ಟಾಂಗ್ ಎನ್ನಲಾಗುತ್ತಿದೆ. ಕಂಗನಾ ನಿರ್ದೇಶಿಸಿ, ನಟಿಸಿದ್ದ ‘ಎಮರ್ಜೆನ್ಸಿ’ ಸಿನಿಮಾ 2025ರಲ್ಲಿ ಬಿಡುಗಡೆಯಾಗಿತ್ತು. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕುರಿತಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿತ್ತು. ವಿಶ್ವದಾದ್ಯಂತ ಕೇವಲ 18.40 ಕೋಟಿ ರೂಪಾಯಿ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ‘ಧುರಂಧರ್ 2’ ಚಿತ್ರದ ಕಥಾಹಂದರದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಕಮಾಯಿ ಮಾಡುತ್ತಿದೆ. ಗಟ್ಟಿಯಾದ ಚಿತ್ರಕಥೆ ಮತ್ತು ಅದ್ದೂರಿ ಮೇಕಿಂಗ್‌ನಿಂದಾಗಿ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಧುರಂಧರ್ ಮೊದಲ ಪಾರ್ಟ್ ಹಿಟ್ ಆಗಿದ್ದರಿಂದ 2ನೇ ಪಾರ್ಟ್ ಹೆಚ್ಚು ಹೈಪ್ ಪಡೆದುಕೊಂಡಿತು.

0 Shares

By admin

Leave a Reply

Your email address will not be published. Required fields are marked *