ಬೆಂಗಳೂರು : ಗ್ಯಾಸ್ ಸಿಲಿಂಡರ್ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸಲ್ಲಿಸಿದ್ದ, ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಇಂದು ಹೋಟೆಲ್ ಅಸೋಸಿಯೇಷನ್ ಹಾಗೂ ಕೇಂದ್ರ ಸರ್ಕಾರದ ಪರ ವಾದ ಆಲಿಸಿ ರಿಟ್ ಅರ್ಜಿ ಇತ್ಯರ್ಥಪಡಿಸಿದೆ. ಎಲ್ಪಿಜಿ ಪೂರೈಕೆ ಬಗ್ಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.
ಕೇಂದ್ರ ಸರ್ಕಾರ ನೀಡಿರುವ ಹೇಳಿಕೆಯನ್ನು ಸಂಶಯಿಸುವ ಅಗತ್ಯವಿಲ್. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ತಮಿಳುನಾಡಿನಲ್ಲಿ 8500, ಕೇರಳದಲ್ಲಿ 4200 ಸಿಲಿಂಡರ್ ನೀಡಲಾಗುತ್ತಿದೆ.
ಆದರೆ, ಕರ್ನಾಟಕದಲ್ಲಿ ಹೋಟೆಲ್ ಗಳಿಗೆ ಕೇವಲ 1000 ಮಾತ್ರ ನೀಡುತ್ತಿದ್ದಾರೆ. ಸರ್ಕಾರ ಸಿಲಿಂಡರ್ ವಿತರಣೆ ಮಾರ್ಗಸೂಚಿ ಪಾಲಿಸುತ್ತಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಪರ ವಕೀಲ ಕೆ.ಸತೀಶ್ ಭಟ್ ವಾದ ಮಂಡಿಸಿದರು. ಇನ್ನು ಇದಕ್ಕೆ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿ, ಕೇಂದ್ರ ಸರ್ಕಾರ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸುತ್ತಿದೆ.
ತೈಲ, ಅನಿಲ ಪೂರೈಕೆ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿಲ್ಲ. ಎಲ್ಪಿಜಿ, ತೈಲ ಪೂರೈಕೆ ಪರಿಸ್ಥಿತಿ ಪ್ರತಿದಿನವೂ ಬದಲಾಗುತ್ತಿದೆ. ಎಲ್ಪಿಜಿ ಹಂಚಿಕೆ ಸುಧಾರಿಸಲು ಸರ್ಕಾರ ಎಲ್ಲ ಹಂತದ ಪ್ರಯತ್ನ ಮಾಡುತ್ತಿದೆ. ಸರ್ಕಾರವೂ ಕಳಕಳಿಯಿಂದ ಕೆಲಸ ಮಾಡುತ್ತಿದೆ. ಈ ಬಗ್ಗೆ ನಂಬಿಕೆ ಇರಲಿ ಎಂದು ವಾದ ಮಂಡಿಸಿದರು. ನಮ್ಮ ದೇಶದಲ್ಲಿ ಕಚ್ಚಾತೈಲ, ಎಲ್ಪಿಜಿ ಉತ್ಪಾದನೆಯಾಗುತ್ತಿಲ್ಲ.
ಹರ್ಮುಜ್ ಗೆ ಹೋಟೆಲ್ ಅಸೋಸಿಯೋಷನ್ನ ಹಡಗು ಕಳುಹಿಸಿದರೂ ಎಲ್ಪಿಜಿ ತರಲು ಸಾಧ್ಯವೇ? ಬೇರೆ ದೇಶಗಳಿಗೆ ಹೋಲಿಸಿದರೆ ಇಲ್ಲಿನ ಪರಿಸ್ಥಿತಿ ಉತ್ತಮವಾಗಿದೆ. ಯುದ್ಧದ ಸ್ಥಿತಿಯಿರುವಾಗ ಕೋರ್ಟ್ ಈ ಬಗ್ಗೆ ಹಸ್ತಕ್ಷೇಪ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್, ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅಭಿಪ್ರಾಯಪಟ್ಟಿದೆ. ಈ ಮೂಲಕ ಗ್ಯಾಸ್ ಸಿಲಿಂಡರ್ ಬಗ್ಗೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
