ನವದೆಹಲಿ : ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಾರತದಿಂದ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಎದುರಾದರೆ ಕೊಲ್ಕತ್ತಾವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಆ ಹೇಳಿಕೆಗೆ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ನೀವೇನಾದರೂ ಭಾರತದ ಮೇಲೆ ದಾಳಿ ನಡೆಸಿದರೆ ಏನಾಗುತ್ತದೆ ಎಂಬುದನ್ನು ಇನ್ನೊಮ್ಮೆ ಪ್ರಯತ್ನಿಸಿ ನೋಡಿ. 1971ರಲ್ಲಿ ಏನಾಗಿತ್ತೆಂಬುದನ್ನು ನೆನಪಿಸಿಕೊಳ್ಳಿ ಎಂದಿದ್ದಾರೆ.
ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, 1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ಎರಡು ಭಾಗಗಳಾಗಿ ವಿಭಜಿಸಿದ ಪರಿಣಾಮಗಳನ್ನು ನೆನಪಿಸಿಕೊಳ್ಳಿ. ಕೊಲ್ಕತ್ತಾದ ಮೇಲೆ ದಾಳಿ ನಡೆಸಲು ಬಂದರೆ ಪಾಕಿಸ್ತಾನ ಎಷ್ಟು ಭಾಗವಾಗುತ್ತದೋ ದೇವರಿಗೇ ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧವು ಬಾಂಗ್ಲಾದೇಶದ ರಚನೆಗೆ ಕಾರಣವಾದ ದೇಶಗಳ ನಡುವಿನ ಪ್ರಮುಖ ಮಿಲಿಟರಿ ಸಂಘರ್ಷವಾಗಿತ್ತು.
“ಪಾಕಿಸ್ತಾನದ ರಕ್ಷಣಾ ಸಚಿವರು ಈ ರೀತಿಯ ಪ್ರಚೋದನಕಾರಿ ಹೇಳಿಕೆಯನ್ನು ನೀಡಬಾರದಿತ್ತು. 55 ವರ್ಷಗಳ ಹಿಂದೆ ಪಾಕಿಸ್ತಾನವನ್ನು 2 ಭಾಗಗಳಾಗಿ ವಿಂಗಡಿಸಿದಾಗ ಪಾಕಿಸ್ತಾನ ಅದರ ಪರಿಣಾಮಗಳನ್ನು ಅನುಭವಿಸಿತ್ತು. ಅವರು ಬಂಗಾಳದ ಮೇಲೆ ಕಣ್ಣಿಡಲು ಪ್ರಯತ್ನಿಸಿದರೆ ಈ ಬಾರಿ ಪಾಕಿಸ್ತಾನ ಎಷ್ಟು ಭಾಗಗಳಾಗಿ ವಿಂಗಡಿಸಲ್ಪಡುತ್ತದೆಯೋ ದೇವರಿಗೇ ಗೊತ್ತು” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
