ಲಂಡನ್ : ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಧಿಸಿದ ಅದ್ಭುತ ಗೆಲುವಿನ ಬಗ್ಗೆ ಆರ್ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಪ್ರತಿಕ್ರಿಯಿಸಿ, ಮುಂಬೈನಲ್ಲಿ ತಂಡದ ಪ್ರಾಬಲ್ಯ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಮಲ್ಯ “ಆರ್ಸಿಬಿ ನಮ್ಮ ಸಿಂಹಗಳು” ಎಂದು ಶ್ಲಾಘಿಸುತ್ತಾ, ಮುಂಬೈ ಇಂಡಿಯನ್ಸ್ ತವರಿನಲ್ಲಿ ಜಯ ಸಾಧಿಸಲು ಬ್ಯಾಟ್ ಮತ್ತು ಚೆಂಡಿನೊಂದಿಗೆ ಜೋರಾಗಿ ಘರ್ಜಿಸಿದ ಬೆಂಗಳೂರಿನ ಸಿಂಹಗಳು ಎಂದು ಪೋಸ್ಟ್ ಮಾಡಿದ್ದಾರೆ.
ಮಾರ್ಚ್ 2016 ರಲ್ಲಿ ಭಾರತವನ್ನು ತೊರೆದ ಮಲ್ಯ, ಪ್ರಸ್ತುತ ಇಂಗ್ಲೆಂಡ್ನಲ್ಲಿ ನೆಲೆಸಿದ್ದು, ಇಂಗ್ಲೆಂಡ್ ಮತ್ತು ವೇಲ್ಸ್ನಿಂದ ಹೊರಹೋಗದಂತೆ ನಿರ್ಬಂಧಿಸಲಾಗಿದೆ. ಅವರು ಹಲವಾರು ಸಾವಿರ ಕೋಟಿ ಮೊತ್ತದ ಬಹು ಸಾಲ ಮರುಪಾವತಿಯನ್ನು ಬಾಕಿ ಉಳಿಸಿಕೊಂಡಿರುವ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು 2019 ರ ಜನವರಿಯಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟರು. ದೇಶ ತೊರೆದ ಹೊರತಾಗಿಯೂ, ಅವರು ಆರ್ಸಿಬಿಯನ್ನು ಬೆಂಬಲಿಸುತ್ತಲೇ ಬಂದಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆರ್ಸಿಬಿ 4 ವಿಕೆಟ್ಗೆ ಬರೋಬ್ಬರಿ 240 ರನ್ ಸಿಡಿಸಿತು. ಆರಂಭಿಕ 3 ಓವರ್ ಬಳಿಕ ಕುಸಿಯುತ್ತಲೇ ಹೋದ ಮುಂಬೈ 20 ಓವರ್ಗಳಲ್ಲಿ 5 ವಿಕೆಟ್ಗೆ 222 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸಂಕ್ಷಿಪ್ತ ಸೋರ್ – ಆರ್ಸಿಬಿ 20 ಓವರ್ನಲ್ಲಿ 240/4 (ಸಾಲ್ಟ್ 78, ರಜತ್ 53, ಕೊಹ್ಲಿ 50, ಡೇವಿಡ್ 34, ಶಾರ್ದೂಲ್ 1-32), ಮುಂಬೈ 20 ಓವರ್ನಲ್ಲಿ 222/5 (ರುಥರ್ಫೋರ್ಡ್ 71, ಹಾರ್ದಿಕ್ ಪಾಂಡ್ಯ 40, ಸುಯಶ್ 2-47).
ಆರ್ಸಿಬಿ ಮೊದಲ ಓವರ್ನಿಂದಲೇ ಸ್ಫೋಟಕ ಆಟವಾಡಿತು. ಪವರ್ಪ್ಲೇನಲ್ಲೇ ತಂಡ 71 ರನ್ ಸಿಡಿಸಿತು. ಮೊದಲ ವಿಕೆಟ್ಗೆ 10.5 ಓವರ್ನಲ್ಲಿ 120 ರನ್ ಜೊತೆಯಾಟ ಲಭಿಸಿತು. ಸಾಲ್ಟ್ 36 ಎಸೆತಕ್ಕೆ 78 ರನ್ ಚಚ್ಚಿದರು. ಕೊಹ್ಲಿ 38 ಎಸೆತಕ್ಕೆ 50 ರನ್ ಬಾರಿಸಿದರೆ, ಟಿಮ್ ಡೇವಿಡ್ 16 ಎಸೆತಕ್ಕೆ ಔಟಾಗದೆ 34 ರನ್ ಸಿಡಿಸಿದರು. ನಾಯಕ ಪಾಟೀದಾರ್ 53 ರನ್ ಗಳಿಸಿದರು. ಬೌಲಿಂಗ್ನಲ್ಲಿ ಮಿಂಚಿದ ಸುಯಶ್ ಶರ್ಮ 2 ವಿಕೆಟ್ ಕಿತ್ತರು.
