0 Shares

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಇಂದು ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಟಿಎಂಸಿಯ ಲೂಟಿ ಮತ್ತು ಸುಳ್ಳಿನ ರಾಜಕೀಯ, ಭಯದ ಆಳ್ವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ. ಹಾಗೇ, ಬಂಗಾಳಿಗಳು ಅಲ್ಪಸಂಖ್ಯಾತರಾಗಲು ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಟಿಎಂಸಿಗೆ ಯಾವುದೇ ಉದ್ದೇಶ ಅಥವಾ ನೀತಿ ಇಲ್ಲದ ಕಾರಣದಿಂದಾಗಿ ಇತರ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲಲು ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. ಟಿಎಂಸಿ ಬಿಜೆಪಿಯನ್ನು ನಿರಂತರವಾಗಿ ನಿಂದಿಸುತ್ತಿದೆ, ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಆದರೆ, ಕಳೆದ 15 ವರ್ಷಗಳಲ್ಲಿ ಬಂಗಾಳದ ಅಭಿವೃದ್ಧಿಗಾಗಿ ಏನು ಮಾಡಿದೆ ಎಂದು ಹೇಳಲು ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

“ಇದು ಭಯವನ್ನು ಸೋಲಿಸುವ ಯುದ್ಧ, ಇದು ನಂಬಿಕೆಯ ಮೇಲೆ ಬಂಗಾಳವನ್ನು ಮುನ್ನಡೆಸುವ ಯುದ್ಧ. ಟಿಎಂಸಿಯ ಭಯದ ಆಳ್ವಿಕೆಯು ಇನ್ನೇನು ಸ್ವಲ್ಪ ದಿನಗಳಲ್ಲಿ ಕೊನೆಗೊಳ್ಳುತ್ತಿದೆ. ಟಿಎಂಸಿಯ ಸುಳ್ಳುಗಳು ಮತ್ತು ಲೂಟಿಯ ಅಂಗಡಿ ಮುಚ್ಚಲಿದೆ” ಎಂದು ಅವರು ಹೇಳಿದ್ದಾರೆ.

“ಪಶ್ಚಿಮ ಬಂಗಾಳದಲ್ಲಿ ಓಲೈಕೆ ರಾಜಕೀಯವನ್ನು ಶಾಶ್ವತವಾಗಿ ಕೊನೆಗೊಳಿಸಲು ಬಿಜೆಪಿ ಯುಸಿಸಿಯನ್ನು ಜಾರಿಗೆ ತರಲು ಸಂಕಲ್ಪಿಸಿದೆ. ಬಂಗಾಳದಲ್ಲಿ ಬಂಗಾಳಿಗಳು ಅಲ್ಪಸಂಖ್ಯಾತರಾಗಲು ನಾವು ಅವಕಾಶ ನೀಡುವುದಿಲ್ಲ” ಎಂದು ಮೋದಿ ಹೇಳಿದ್ದಾರೆ. ರಾಜ್ಯ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ ಒಂದು ದಿನದ ನಂತರ ಮೋದಿಯ ಈ ಹೇಳಿಕೆಗಳು ಬಂದಿವೆ.

0 Shares

By admin

Leave a Reply

Your email address will not be published. Required fields are marked *