ಬಾಗಲಕೋಟೆ : ಕಟರ್ ಮಿಷನ್ಗಳನ್ನು ತೆಗೆದುಕೊಂಡು ಬಂದು ಕಳ್ಳತನಕ್ಕೆ ಯತ್ನಿಸಿದ ಕಳ್ಳರ ಗುಂಪೊಂದು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ಆತಂಕ ಸೃಷ್ಟಿಸಿದೆ. ಇಲಕಲ್ಲ ನಗರದ ಕೆಎಚ್ಡಿಸಿ ಕಾಲೋನಿ ಹಾಗೂ ವಿದ್ಯಾಗಿರಿ ಕಾಲೋನಿಯ ನೇಕಾರ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕಳ್ಳರ ಕೃತ್ಯಕ್ಕೆ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಮಾಹಿತಿಯಂತೆ, ಮುಸುಕು ಧರಿಸಿ ಕೈಯಲ್ಲಿ ಕಟರ್ ಮಿಷನ್ ಹಿಡಿದ ನಾಲ್ವರು ಕಳ್ಳರು ಕಾಲೋನಿಗೆ ನುಗ್ಗಿ ನಾಲ್ಕು ಮನೆಗಳ ಬೀಗಗಳನ್ನು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ ಮೂರು ಮನೆಗಳಲ್ಲಿ ಏನೂ ಸಿಗದೆ ಕಳ್ಳರು ನಿರಾಶರಾಗಿದ್ದಾರೆ.
ನಾಲ್ಕನೇ ಮನೆಗೆ ನುಗ್ಗಲು ಯತ್ನಿಸುತ್ತಿದ್ದ ವೇಳೆ ಬೀಗ ಮುರಿಯುವ ಶಬ್ದಕ್ಕೆ ಪಕ್ಕದ ಮನೆಯ ಮಹಿಳೆಯೊಬ್ಬರು ಎಚ್ಚರಗೊಂಡಿದ್ದಾರೆ. ಅವರು ಕೂಗಿ ಎಚ್ಚರಿಸಿದ ತಕ್ಷಣ ಕಳ್ಳರ ಕೃತ್ಯ ಬಹಿರಂಗವಾಗಿದೆ. ಇದರಿಂದ ಆತಂಕಗೊಂಡ ಕಳ್ಳರು, ಆ ಮಹಿಳೆಯ ಮನೆಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಎಸೆದು ಬಾಗಿಲು ಹಾಗೂ ಕುರ್ಚಿಗಳಿಗೆ ಹಾನಿ ಉಂಟುಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆ ಫೆಬ್ರವರಿ 17ರಂದು ಬೆಳಗಿನ ಜಾವ ಸುಮಾರು 2 ಗಂಟೆ ವೇಳೆಗೆ ನಡೆದಿದೆ ಎಂದು ತಿಳಿದುಬಂದಿದೆ. ಕಳ್ಳರ ಗುಂಪು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಲೋನಿಯ ನಿವಾಸಿಗಳು ಭಯಭೀತರಾಗಿದ್ದಾರೆ. ಈ ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
