ಕುಣಿಗಲ್ : ಬಜೆಟ್ನಲ್ಲಿ ಕ್ಷೇತ್ರದ ಪ್ರಮುಖ ಬೇಡಿಕೆಗಳಿಗೆ ಸ್ಪಂದನೆ ಸಿಗುವ ನಿರೀಕ್ಷೆಯಿದೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ಹೇಳಿದರು. ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರದ ಬಳಿ ಮನವಿ ಮಾಡಿದ್ದೇವೆ. ನಮ್ಮ ತಾಲೂಕಿಗೆ ಮೆಡಿಕಲ್ ಕಾಲೇಜು ಅಗತ್ಯವಿದ್ದು, ಅದನ್ನು ಸ್ಥಾಪಿಸುವುದು ನನ್ನ ಆಶಯವಾಗಿದೆ. ಸರ್ಕಾರದಿಂದ ಸಾಧ್ಯವಾಗದಿದ್ದರೂ ಪಿಪಿಪಿ ಮಾದರಿಯಲ್ಲಿ ಮಾಡಬಹುದು ಎಂದು ಅವರು ಹೇಳಿದರು.
ರೈತರ ಮಕ್ಕಳ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಸಾಮಾಜಿಕ ಸಮಸ್ಯೆಗೂ ಗಮನ ಸೆಳೆದ ಅವರು, ರೈತರ ಮನೆಗೆ ಸೊಸೆ ಆಗುವವರಿಗೆ ಭತ್ಯೆ ನೀಡಬೇಕು. ಆ ಭತ್ಯೆಯನ್ನು ನೇರವಾಗಿ ಹೆಣ್ಣುಮಕ್ಕಳಿಗೆ ಅಥವಾ ಅವರ ಮಕ್ಕಳಿಗೆ ನೀಡಬಹುದು. ಕಾನೂನು ಅಡಿಯಲ್ಲಿ ಭತ್ಯೆ ಘೋಷಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಸೂಕ್ತ ಸಂದರ್ಭದಲ್ಲಿ ಮುಖ್ಯಮಂತ್ರಿ ಉತ್ತರ ಕೊಡುತ್ತಾರೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ರಂಗನಾಥ್, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂಬ ನಂಬಿಕೆ ನಮಗೆ ಇದೆ. ಸೂಕ್ತ ಸಮಯದಲ್ಲಿ ಅವರೇ ರಾಜ್ಯದ ಜನತೆಗೆ ಉತ್ತರ ಕೊಡುತ್ತಾರೆ. ಅಧಿಕಾರದ ಒಪ್ಪಂದ ಇದ್ದರೆ ಅದರ ಬಗ್ಗೆ ಸ್ವತಃ ಸಿಎಂ ಉತ್ತರಿಸುವ ವಿಶ್ವಾಸ ನಮಗಿದೆ ಎಂದು ಹೇಳಿದರು.
ಮಹದೇವಪ್ಪ ಹೇಳಿಕೆಗೆ ಆಕ್ಷೇಪ – ‘ನಾಯಿಗಳು’ ಎಂಬ ಹಿರಿಯ ಸಚಿವ ಮಹದೇವಪ್ಪ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಂಗನಾಥ್, 2018ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷವನ್ನು ಮುನ್ನಡೆಸಿದ ಪರಿಣಾಮ 80 ಸ್ಥಾನಗಳು ಬಂದಿದ್ದವು. ಅವರ ನಾಯಕತ್ವದಲ್ಲೇ ನಾವು ಚುನಾವಣೆ ಎದುರಿಸಿದ್ದೇವೆ. ಮುಂದೆಯೂ ಅವರು ಲೀಡ್ ತೆಗೆದುಕೊಳ್ಳುತ್ತಾರೆ ಎಂದರೆ ನಾವು ಅವರ ಹಿಂದೆ ಹೋಗಲು ಸಿದ್ಧ. ಆದರೆ ಹಿರಿಯ ನಾಯಕರು ಹಾಗೂ ಸಚಿವರಿಂದ ಇಂತಹ ಪದಗಳು ಬರಬಾರದು. ಕಾರ್ಯಕರ್ತರು ಇಂಥ ಮಾತುಗಳನ್ನು ನಿರೀಕ್ಷಿಸುವುದಿಲ್ಲ ಎಂದು ಹೇಳಿದರು.
ಮಾಧ್ಯಮಗಳ ಮೇಲಿನ ನಿರ್ಬಂಧಕ್ಕೆ ವಿರೋಧ – ಕಾಂಗ್ರೆಸ್ ಶಾಸಕರಾಗಿದ್ದರೂ ಸರ್ಕಾರದ ಮಾಧ್ಯಮ ನಿರ್ಬಂಧ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಮಾಧ್ಯಮಗಳ ಮೂಲಕವೇ ನಮ್ಮ ಅನಿಸಿಕೆಗಳು, ಅಭಿಪ್ರಾಯಗಳು ಮತ್ತು ಸಮಸ್ಯೆಗಳು ಜನತೆಗೆ ತಲುಪುತ್ತವೆ. ಮಾಧ್ಯಮಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂಬುದೇ ನಮ್ಮ ಧ್ಯೇಯ ಎಂದು ಸ್ಪಷ್ಟಪಡಿಸಿದರು.
