ಬೆಂಗಳೂರು : ಆಸ್ಸಾಂ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮೂರುರಿಂದ ನಾಲ್ಕು ಸಭೆಗಳು ನಡೆದಿದ್ದು, ಚುನಾವಣೆಯ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಬಾರಿ ಆಸ್ಸಾಂನಲ್ಲಿ ಬದಲಾವಣೆ ಆಗಲಿದೆ ಎಂಬ ಭರವಸೆ ನಮಗೆ ಇದೆ. ಪ್ರಿಯಾಂಕ ಗಾಂಧಿ ಸೇರಿದಂತೆ ನಮ್ಮ ಎಲೆಕ್ಷನ್ ತಂಡ ಇಂದು ಆಸ್ಸಾಂಗೆ ತೆರಳುತ್ತಿದೆ ಎಂದು ಅವರು ತಿಳಿಸಿದರು.
ಕಸದ ವಿಚಾರದಲ್ಲಿ ಬಿಜೆಪಿ ಶಾಸಕರ ಪ್ರತಿಭಟನೆಗೆ ಪ್ರತಿಕ್ರಿಯೆ – ಕಸದ ವಿಚಾರದಲ್ಲಿ ಬಿಜೆಪಿ ಶಾಸಕರು ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅವರು ಹೋರಾಟ ಬಿಡುವುದು ಬೇಡ. ಯಾರು ಹೋರಾಟ ಮಾಡ್ತಾರೆ ಅವರ ಕ್ಷೇತ್ರದ ಕಸವನ್ನೇ ತೆಗೆದುಕೊಳ್ಳುವುದಿಲ್ಲ. ಅವರ ಕ್ಷೇತ್ರದ ಜನರೇ ಅವರಿಗೆ ಉಳಿಯುತ್ತಾರೆ ಎಂದು ವ್ಯಂಗ್ಯವಾಡಿದರು.
ಕಸವನ್ನ ಎಲ್ಲಾದರೂ ಹಾಕಬೇಕಲ್ಲ. ಶಾಶ್ವತವಾಗಿ ಕಸ ವಿಲೇವಾರಿ ಮಾಡಲು ನಾವು ನಾಲ್ಕು ಸ್ಥಳಗಳನ್ನು ಗುರುತಿಸಿದ್ದೇವೆ. ಸ್ವಲ್ಪ ಜಾಗದ ಸಮಸ್ಯೆ ಇದ್ದು, ಎರಡು ಸ್ಥಳಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
ಮಹದೇವಪುರ ಕ್ಷೇತ್ರದವರು ಹೋರಾಟ ಮಾಡುತ್ತಿದ್ದಾರೆ. ನಾವು ಕೂಡ ಕಸ ತಗೆಯುವುದನ್ನೇ ನಿಲ್ಲಿಸಿದರೆ ಏನಾಗುತ್ತದೆ ಎಂದು ಪ್ರಶ್ನಿಸಿದ ಅವರು, ಅವರು ಏನೇನೋ ಮಾಡ್ತಿದ್ದಾರೆ, ನಾವು ನಮ್ಮ ಕೆಲಸ ಮಾಡ್ತೇವೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
