ಬೆಂಗಳೂರು : ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಾಗರಿಕರ ಸಮಸ್ಯೆಗಳನ್ನು ಆಲಿಸಿ, ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ, ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಇಂದು ಬೆಳಿಗ್ಗೆ 7.00 ಗಂಟೆಯಿಂದ ಅಮೃತಹಳ್ಳಿ ಮುಖ್ಯರಸ್ತೆಯಲ್ಲಿರುವ ನಗರ ಪಾಲಿಕೆಯ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಫೋನ್–ಇನ್ ಕಾರ್ಯಕ್ರಮವನ್ನು ಆಯೋಜಿಸಿ, ನಾಗರಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿದರು.
ಈ ಕಾರ್ಯಕ್ರಮದ ವೇಳೆ ವಿವಿಧ ವಾರ್ಡ್ಗಳಿಂದ ಬಂದ ಹಲವು ದೂರಗಳನ್ನು ಆಲಿಸಿ, ಅವುಗಳ ತ್ವರಿತ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಫೋನ್–ಇನ್ ಕಾರ್ಯಕ್ರಮದ ಪ್ರಗತಿ : ಸೆಪ್ಟೆಂಬರ್ 26ರಿಂದ ಆರಂಭಗೊಂಡ ಈ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ಮೂಲಕ ಕಳೆದ 27 ವಾರಗಳಲ್ಲಿ ಒಟ್ಟು 1563 ಅಹವಾಲುಗಳು ದಾಖಲಾಗಿದ್ದು, ಅವುಗಳಲ್ಲಿ 1110 ಅಹವಾಲುಗಳಿಗೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಉತ್ತರ ನಗರ ಪಾಲಿಕೆ ವ್ಯಾಪ್ತಿಗೆ ಸೇರದ 93 ಅಹವಾಲುಗಳನ್ನು ಸಂಬಂಧಪಟ್ಟ ಇತರೆ ನಗರ ಪಾಲಿಕೆಗಳು ಹಾಗೂ ಇಲಾಖೆಗಳಿಗೂ ವರ್ಗಾಯಿಸಲಾಗಿದ್ದು, ಉಳಿದ 316 ಅಹವಾಲುಗಳ ಕುರಿತು ತ್ವರಿತ ಕ್ರಮ ಜರುಗಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಂದಿನ ಕಾರ್ಯಕ್ರಮದ ವಿವರ : ಇಂದು ನಡೆದ ಫೋನ್–ಇನ್ ಕಾರ್ಯಕ್ರಮದಲ್ಲಿ ಒಟ್ಟು 47 ಕರೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳ ಮೂಲಕ ಒಟ್ಟು 63 ಅಹವಾಲುಗಳು ದಾಖಲಾಗಿವೆ. ಎಲ್ಲಾ ಅಹವಾಲುಗಳನ್ನು ಪರಿಶೀಲಿಸಿ, ತಕ್ಷಣ ಸ್ಪಂದಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ರಸ್ತೆಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ : ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ 29 ಅಹವಾಲುಗಳು ಬಂದಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯಗಳಲ್ಲಿ ಗುಣಮಟ್ಟ ಕಾಪಾಡಿಕೊಂಡು, ಆದ್ಯತೆಯ ಆಧಾರದಲ್ಲಿ ಕೆಲಸಗಳನ್ನು ವೇಗಗೊಳಿಸಿ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತ್ಯಾಜ್ಯ ನಿರ್ವಹಣೆಗೆ ಒತ್ತು : ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಸಂಬಂಧಿಸಿದಂತೆ 11 ಅಹವಾಲುಗಳು ದಾಖಲಾಗಿದ್ದು, ಎಲ್ಲಾ ವಾರ್ಡ್ಗಳಲ್ಲಿ ಸಮಯಪಾಲನೆಯೊಂದಿಗೆ ತ್ಯಾಜ್ಯ ಸಂಗ್ರಹಣೆ ನಡೆಯುವಂತೆ ಹಾಗೂ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆ ಜಾರಿಗೊಳಿಸುವಂತೆ ಸಂಬಂಧಪಟ್ಟ ವಿಭಾಗಗಳಿಗೆ ಸೂಚಿಸಲಾಯಿತು.
ಉಳಿದಂತೆ ಅಪಾಯ ಸ್ಥಿತಿಯಲ್ಲಿರುವ ಮರಗಳ ರೆಂಬೆ ಕೊಂಬೆಗಳ ತೆರವು ಸಂಬಂಧಿಸಿದಂತೆ 3 ಹಾಗೂ ಆರೋಗ್ಯ ವಿಭಾಗಕ್ಕೆ ಸಂಬಂಧಿಸಿದಂತೆ 3 ಮತ್ತು ಖಾತಾ ಸೇವೆಗೆ ಸಂಬಂಧಿಸಿದಂತೆ 2 ಅಹವಾಲುಗಳು ದಾಖಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ತ್ವರಿತ ಕ್ರಮಕ್ಕೆ ಸೂಚನೆ ನೀಡಿದರು.
ಹೆಚ್ಚಿನ ಮಾಹಿತಿ : ಕಳೆದ 27 ವಾರಗಳಲ್ಲಿ ಹಾಗೂ ಇಂದು ಸ್ವೀಕರಿಸಲಾದ ಅಹವಾಲುಗಳ ಪ್ರಗತಿ ವಿವರವುಳ್ಳ ಪಟ್ಟಿ ಲಗತ್ತಿಸಲಾಗಿದೆ.
ಪ್ರತಿ ಶುಕ್ರವಾರ ಫೋನ್–ಇನ್ ಕಾರ್ಯಕ್ರಮ : ನಾಗರಿಕರ ಸಮಸ್ಯೆಗಳಿಗೆ ನೇರ ಪರಿಹಾರ ಒದಗಿಸುವ ಹಾಗೂ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸುವ ಉದ್ದೇಶದಿಂದ ಆಯುಕ್ತರ ಫೋನ್–ಇನ್ ಕಾರ್ಯಕ್ರಮವು ಪ್ರತಿ ಶುಕ್ರವಾರವೂ ನಿಯಮಿತವಾಗಿ ನಡೆಯಲಿದೆ.
