0 Shares

ನವದೆಹಲಿ : ಕೇರಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗುಜರಾತ್ ಜನರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿಯೇ ತಿರುಚಲಾಗಿದೆ, ನಾನು ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಗುಜರಾತ್ ಜನ ಅನಕ್ಷರಸ್ಥರು ಎಂದು ಖರ್ಗೆ ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ. ಕೇರಳದಲ್ಲಿ ಮಾಡಿದ ಚುನಾವಣಾ ಭಾಷಣದ ಬಗ್ಗೆ ಖರ್ಗೆ ಸ್ಪಷ್ಟೀಕರಣ ನೀಡಿದ್ದು, ತಮ್ಮ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದ್ದಾರೆ.

ಗುಜರಾತ್ ಜನರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ನಾವು ಎಂದೂ ಹೊಂದಿಲ್ಲ. ಗುಜರಾತ್ ಜನರ ಬಗ್ಗೆ ತಮಗೆ ಯಾವಾಗಲೂ ಗೌರವವಿದೆ ಮತ್ತು ಮುಂದೆಯೂ ಇರುವುದಾಗಿ ಅವರು ಹೇಳಿದರು. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಕೇರಳದ ಜನರ ಶಿಕ್ಷಣ ಮತ್ತು ಬುದ್ಧಿವಂತಿಕೆಯನ್ನು ಶ್ಲಾಘಿಸಿದರು.

ಗುಜರಾತ್ ಮತ್ತು ಇತರ ಸ್ಥಳಗಳಲ್ಲಿರುವಂತೆ, ಕಡಿಮೆ ಶಿಕ್ಷಣ ಹೊಂದಿರುವವರನ್ನು ಮೂರ್ಖರನ್ನಾಗಿಸಬಹುದು ಎಂದು ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಅವರು ಟೀಕಿಸಿದ್ದರು. ಕೇರಳದ ಮತದಾರರನ್ನು ದಾರಿ ತಪ್ಪಿಸುವುದು ಅಸಾಧ್ಯ ಎಂದು ಅವರು ಹೇಳಿದ್ದರು.

ಈ ಹೇಳಿಕೆಯ ನಂತರ, ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ವಿರುದ್ಧ ಹೋರಾಟ ಆರಂಭಿಸಿತು. ಇದು ಕಾಂಗ್ರೆಸ್‌ನ ಒಡೆದು ಆಳುವ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ಹೇಳಿದ್ದರು. ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಈ ಹೇಳಿಕೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದರು.

ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಮತ್ತು ಮೊರಾರ್ಜಿ ದೇಸಾಯಿ ಅವರಂತಹ ಮಹಾನ್ ವ್ಯಕ್ತಿಗಳು ಸಹ ಅನಕ್ಷರಸ್ಥರೇ ಎಂದು ಅವರು ಪ್ರಶ್ನಿಸಿದರು. ಖರ್ಗೆ ಅವರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯಿಸಿತು ಮತ್ತು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಳಿದ್ದಾರೆ.

ಮೋದಿ ಜೀ ನೀವು ಗುಜರಾತ್​​ನ ಅನಕ್ಷರಸ್ಥ ಜನರನ್ನು ಮರುಳು ಮಾಡಬಹುದು, ಆದರೆ ನೀವು ಕೇರಳದ ಜನರನ್ನು ಮರುಳು ಮಾಡುವುದು ಅಸಾಧ್ಯ ಎಂದು ಖರ್ಗೆ ಹೇಳಿದ್ದರು. ಖರ್ಗೆ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ನಾಯಕರು ವಿರೋಧ ಪಕ್ಷದ ಡಿಎನ್​ಎಯಲ್ಲಿ ಗುಜರಾತ್ ವಿರೋಧಿ ವಿಷವಿದೆ ಎಂದು ಆರೋಪಿಸಿದ್ದಾರೆ.

0 Shares

By admin

Leave a Reply

Your email address will not be published. Required fields are marked *