ಮಂಡ್ಯ : ಸಚಿವ ಹೆಚ್.ಸಿ. ಮಹದೇವಪ್ಪ ಅವರು ಶಾಸಕರನ್ನು ‘ಬೀದಿ ನಾಯಿ’ಗೆ ಹೋಲಿಸಿದ ಹೇಳಿಕೆ ಕುರಿತು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಮಂಡ್ಯದ ಬೂದನೂರಿನಲ್ಲಿ ಮಾತನಾಡಿದ ಅವರು, “ನಾಯಿ ಎಂದರೆ ಪ್ರಾಮಾಣಿಕತೆ ಹಾಗೂ ನಿಯತ್ತು. ಶಾಸಕರು ನಿಯತ್ತು ಎಂಬ ಅರ್ಥದಲ್ಲೇ ಹೇಳಿದ್ದಾರೆ ಅನ್ನಿಸುತ್ತೆ” ಎಂದು ವ್ಯಂಗ್ಯವಾಡಿದರು.
‘ಡಿಕೆಶಿ ಎಂದರೆ ಕಾಂಗ್ರೆಸ್ ಪಕ್ಷದ ನಿಯತ್ತು’ – ಡಿ.ಕೆ. ಶಿವಕುಮಾರ್ ಎಂದರೆ ಕಾಂಗ್ರೆಸ್ ಪಕ್ಷದ ನಿಯತ್ತು. ಅವರು ಹೈಕಮಾಂಡ್ನ ನಿಯತ್ತಿನ ಸೈನಿಕ. ಕಳೆದ 40 ವರ್ಷಗಳಿಂದ ಹೈಕಮಾಂಡ್ಗೆ ಸಂಪೂರ್ಣವಾಗಿ ನಿಯತ್ತಾಗಿ ಇದ್ದಿದ್ದಾರೆ ಎಂದು ಹೇಳಿದರು.
ಎರಡು ಬಾರಿ ಸಚಿವ ಸ್ಥಾನ ಸಿಗದಿದ್ದರೂ ಡಿಕೆಶಿ ಬೇಜಾರ್ ಮಾಡಿಕೊಂಡಿಲ್ಲ. ಇನ್ನೂ ಅವರು ಮುಖ್ಯಮಂತ್ರಿ ಆಗಿಲ್ಲ, ಆದರೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಅವರು ಪಕ್ಷಕ್ಕೆ ಸದಾ ನಿಯತ್ತಾಗಿದ್ದಾರೆ. ಅದಕ್ಕೇ ಮಹದೇವಪ್ಪ ಅವರು ಆ ರೀತಿಯಲ್ಲಿ ಹೇಳಿದ್ದಾರೆ ಎಂದು ರವಿಕುಮಾರ್ ಹೇಳಿದರು.
‘ಒಂದು ವಾರ ಸಮಯ ಕೊಡಿ’ – “ಒಂದು ವಾರ ನನಗೆ ಟೈಂ ಕೊಡಿ. ನೇರವಾಗಿ ಎಲ್ಲ ವಿಚಾರಗಳಿಗೂ ಉತ್ತರ ಕೊಡುತ್ತೇನೆ. ನಾಯಿ, ವ್ಯಂಗ್ಯ ಸೇರಿದಂತೆ ಎಲ್ಲಕ್ಕೂ ಸೂಕ್ತ ಉತ್ತರ ನೀಡುತ್ತೇನೆ” ಎಂದು ಸಚಿವ ಮಹದೇವಪ್ಪ ಅವರಿಗೆ ಟಾಂಗ್ ನೀಡಿದರು.
